23.ಫೆಬ್ರುವರಿ.25:-ಮಾನ್ವಿ ಪಟ್ಟಣದ ಜುಮ್ಮಲದೊಡ್ಡಿ ಕೆರೆಯನ್ನು ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಈ ಕುರಿತು ವರದಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಆದೇಶ ನೀಡಿದರು.
ಮಾನ್ವಿ ಪಟ್ಟಣದ ಜುಮ್ಮಲದೊಡ್ಡಿ, ಬೆಳಗಾಮ ಪೇಟೆ, ಆದಾಪುರ ಪೇಟೆ, ಕುಂಬಾರ ವಾಡಿ, ಪಿಂಜಾರ ಓಣಿ, ಕಲ್ಮಠ ಏರಿಯಾ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಜುಮ್ಮಲದೊಡ್ಡಿಯ ಕುಡಿಯುವ ನೀರಿನ ಕೆರೆಗೆ ಸಚಿವರಾದ ಎನ್ ಎಸ್ ಬೋಸರಾಜು ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ ಅವರು ಭೇಟಿ ನೀಡಿ ಜುಮ್ಮಲದೊಡ್ಡಿ ಕೆರೆಯನ್ನು ಪರಿಶೀಲಿಸಿದರು.
ಪುರಾತನ ಕಾಲದ ಐತಿಹಾಸಿಕ ಕೆರೆಯಾದ ಜಮ್ಮಲದೊಡ್ಡಿ ಕೆರೆಯನ್ನು ಸಂರಕ್ಷಿಸುವುದು ಹಾಗೂ ಅಭಿವೃದ್ಧಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಕೆರೆಯನ್ನು ಶೀಘ್ರ ಅಭಿವೃದ್ಧಿಗೊಳಿಸಿ ಪಟ್ಟಣದ ವಿವಿಧ ಬಡಾವಣೆಗಳಿಗೆ ಅನುಕೂಲವಾಗುವಂತೆ ನೀರಿನ್ನು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಜುಮ್ಮಲದೊಡ್ಡಿ ಕೆರೆ ಬತ್ತಿದ ಹಿನ್ನಲೆ ವಿವಿಧ ವಾರ್ಡ್ ಗಳಿಗೆ ನೀರಿನ ತೊಂದರೆಯಾಗುತ್ತಿದೆ. ಕಾರಣ ನೀರು ಸರಬರಾಜುಗಾಗಿ ಪರ್ಯಾಯ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷರಾದ ಡಿ ವೀರೆಶ, ಸದಸ್ಯರಾದ ಜಿಲಾನಿ ಖುರೇಷಿ, ಮುಖಂಡರಾದ ಖಾಲಿದ್ ಗುರು, ಪುರಸಭೆ ಮುಖ್ಯ ಅಧಿಕಾರಿ ಪರಶುರಾಮ್ ದೇವರಮನಿ, ಸಹಾಯಕ ಅಭಿಯಂತರರಾದ ಚೇತನಾ, ಸಿಬ್ಬಂದಿಗಳಾದ ಕೃಷ್ಣಪ್ಪಾ, ಜಾಫರ್, ಬಿಕೆ ಅಮರೇಶಪ್ಪ, ರೌಡೂರ ಮಹಾಂತೇಶ ಸ್ವಾಮಿ ಸೇರಿದಂತೆ ಬಡಾವಣೆಯ ಅನೇಕರಿದ್ದರು.
