ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗಿನ 73 ಸಾವಿರ ಗೆಸ್ಟ್ ಟೀಚರ್ಗೆ ಇಲ್ಲ ಸೇವಾ ಭದ್ರತೆ
ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರನ್ನೇ ನೆಚ್ಚಿಕೊಳ್ಳಲಾಗಿದೆ. ಸುಮಾರು 73 ಸಾವಿರ ‘ಅತಿಥಿ’ ಮೇಷ್ಟ್ರುಗಳು ಪಾಠ ಮಾಡುತ್ತಿದ್ದಾರೆ. ಅದರೆ ಪ್ರತಿ ವರ್ಷದ ಸೇವಾಭದ್ರತೆ ಸೇರಿದಂತೆ ಹಕ್ಕಿಗಾಗಿ ಹೊನಾಡುತ್ತಲೇ ಶೈಕ್ಷಣಿಕ ವರ್ಷ ಮುಗಿಸುವ ಸವಾಲು ಇವರದ್ದು. ಶಿಕ್ಷಕರು, ಉಪನ್ಯಾಸಕರ ಕೊರತೆ ಜತೆಗೆ ಇತರೆ ಹುದ್ದೆಗಳು ಶಿಕ್ಷಣ ಇಲಾಖೆಯಲ್ಲಿ ಖಾಲಿ ಬಿದ್ದಿವೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಒಟ್ಟು 62,145 ಹಾಗೂ ಉನ್ನತ ಶಿಕ್ಷಣ ಇಲಾಖೆಯಲ್ಲಿ 13,013 ಹುದ್ದೆಗಳು ಖಾಲಿ ಇವೆ. ಅಕ್ಷರ ಕಲಿಸಲೂ ಮೇಷ್ಟಿಲ್ಲ: ರಾಜ್ಯದಲ್ಲಿ 41,905 ಪ್ರಾಥಮಿಕ ಶಾಲೆಗಳಲ್ಲಿ 50,067 ಹಾಗೂ 4,871 ಪ್ರೌಢಶಾಲೆಗಳಲ್ಲಿ 9,705 ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ 59,772 ಖಾಲಿ ಹುದ್ದೆಗಳಿಗಾಗಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಭರ್ತಿ ಮಾಡಿಕೊಂಡಿದ್ದು 43,968 ಅತಿಥಿ ಶಿಕ್ಷಕರನ್ನು ಮಾತ್ರ! ಪಿಯು, ಪದವಿಗಿಲ್ಲ ಉಪನ್ಯಾಸಕರು: ರಾಜ್ಯದ 1,232 ಪದವಿ ಪೂರ್ವ ಕಾಲೇಜುಗಳಲ್ಲಿ 11,550 ಉಪನ್ಯಾಸಕ ಹುದ್ದೆಗಳಷ್ಟೇ ಭರ್ತಿ ಇದ್ದು, 4.689 ಅತಿಥಿ ಉಪನ್ಯಾಸಕರು ಹೆಚ್ಚುವರಿ ಕಾರ್ಯಭಾರ ಸಹಿತ ಪಾಠ ಮಾಡಿದ್ದಾರೆ. 430 ಸರಕಾರಿ ಪ್ರಥಮ ದರ್ಜೆ ಕಾಲೇಜಲ್ಲಿಕಾಯಂ ಉಪನ್ಯಾಸಕರು ಇರುವುದು 6,000 ಮಾತ್ರ! 100ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಕಾಯಂ ಪ್ರಾಂಶುಪಾಲರೇ ಇಲ್ಲ.9,000 ಅತಿಥಿಉಪನ್ಯಾಸಕರು ಸದ್ಯ ಸೇವೆ ಸಲ್ಲಿಸುತ್ತಿದ್ದು, ಹೆಚ್ಚುವರಿ ಕನಿಷ್ಠ 2,000 ಉಪನ್ಯಾಸಕರ ಬೇಡಿಕೆಯಿದೆ.
ಯುಜಿಸಿ ಸಂಬಳ ಕ್ಲರ್ಕ್ ಕೆಲಸ! ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಿಗೆ ನೇಮಕವಾಗಿ ಯುಜಿಸಿ ಸಂಬಳ ಪಡೆಯುತ್ತಿರುವ ಕಾಯಂ ಉಪನ್ಯಾಸಕರು ಪಾಠ ಮಾಡುವುದು ಬಿಟ್ಟು ಪ್ರಭಾವ ಬಳಸಿ ನಿಯೋಜನೆ ತೆಗೆದುಕೊಂಡು ಇಲಾಖೆ ಕಾರ್ಯಾಲಯ ಕೆಲಸಕ್ಕೆ ಹೋಗುತ್ತಿದ್ದಾರೆ. ಇಂತಹ ಸುಮಾರು 50 ಉಪನ್ಯಾಸಕರಿದ್ದಾರೆಂದು ತಿಳಿದಿದೆ. ಇಲಾಖೆ ಕಚೇರಿ ಕೆಲಸಕ್ಕೆ ಹುದ್ದೆಗಳು ಖಾಲಿ ಇದ್ದರೆ ಬೆಳೆ ನೇಮಕ ಮಾಡಿಕೊಳ್ಳಲಿ. ಉಪನ್ಯಾಸಕರಾಗಿ ನೇಮ ಕವಾಗಿ ಯುಜಿಸಿ ಸಂಬಳ ಪಡೆಯುವವರನ್ನು ಪಾಠ ಮಾಡಲು ವಾಪಸು ಕಳುಹಿಸಬೇಕೆನ್ನುವುದೂ ಅತಿಥಿ ಉಪನ್ಯಾಸಕರ ಆಗ್ರಹ.
ನರೇಗಾ ಕೂಲಿಗಿಂತಲೂ ಕಡಿಮೆ ರಾಜ್ಯದಲ್ಲಿ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೂ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರನ್ನೇ ನೆಚ್ಚಿಕೊಂಡಿದ್ದರೂ ಅವರಿಗೆ ನೀಡುತ್ತಿರುವ ಗೌರವ ಧನ ಮಾತ್ರ ಕಡಿಮೆ. ಪ್ರಾಥಮಿಕ ಶಾಲಾ ಅತಿಥಿ ಉಪನ್ಯಾಸಕರಿಗೆ 10,000 ರೂ, ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ 10,500 ರೂ. ಪಿಯು ಅತಿಥಿ ಉಪನ್ಯಾಸಕರಿಗೆ 12,000 ರೂ ಹಾಗೂ ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಗೆ 35,000 ರೂ ಗೌರವಧನ ಸಿಗುತ್ತಿದೆ. ಗಮನಕ್ಕಿರಲಿ: ನರೇಗಾ ಕೂಲಿ 370 ರೂ…ಆದರೆ ಪ್ರಾಥಮಿಕ ಶಾಲಾ ಅತಿಥಿ ಉಪನ್ಯಾಸಕರ ಸಂಬಳ ದಿನದ ಲೆಕ್ಕ ಹಾಕಿದರೆ 333 ರೂ ಮಾತ್ರ.
ಇಡೀ ಶಿಕ್ಷಣ ವ್ಯವಸ್ಥೆ ಅತಿಥಿ ಉಪನ್ಯಾಸಕರನ್ನು ನೆಚ್ಚಿಕೊಂಡಿದೆ. ಆದರೆ ಸೇವಾಭದ್ರತೆ ಸೇರಿದಂತೆ ಯಾವುದೇ ಅವಶ್ಯಕ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಉಪನ್ಯಾಸಕರ ಬದುಕು ಹಾಳಾಗುತ್ತಿದೆ. ಮುಖ್ಯಮಂತ್ರಿಗಳ ಸಭೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಿ ಅತಿಥಿ ಉಪನ್ಯಾಸಕರ ಹಿತ ಕಾಯಬೇಕು. ಇಲ್ಲದಿದ್ದರೆ ಮತ್ತೆ ಬೀದಿಗಿಳಿದು ಹೋರಾಟ ಮಾಡಬೇಕಿರುವುದು ಅನಿವಾರ್ಯವಾಗುತ್ತದೆ. – ಡಾ. ಹುನಮಂತಗೌಡ ಕಲ್ಮನಿ ರಾಜ್ಯಾಧ್ಯಕ್ಷ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸರ ಸಂಘ
ಉಪನ್ಯಾಸಕರು ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ಅತ್ಯಂತ ಕೇವಲವಾಗಿ ನಡೆಸಿಕೊಳ್ಳಲಾಗುತ್ತಿದೆ. ಸಂಬಳ ಕೊಡುವುದು 10 ಗಂಟೆ ಕಾರ್ಯಭಾರಕ್ಕೆ, ದುಡಿಸಿಕೊಳ್ಳುವುದು 20 ಗಂಟೆಗೂ ಹೆಚ್ಚು ಕಾರ್ಯಭಾರಕ್ಕೆ. ಕಡೆಗಣನೆ ಮುಂದುವರೆದರೆ ಮತ್ತೆ ಮತ್ತೆ ಪ್ರತಿಭಟನೆ ಅನಿವಾರ್ಯ. -ರಾಜೇಶ್ ಭಟ್ ರಾಜ್ಯಾಧ್ಯಕ್ಷ, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ
ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ತಳಪಾಯ ಪ್ರಾಥಮಿಕ ಶಿಕ್ಷಣ. ರಾಜ್ಯದಲ್ಲಿ 50,067 ಪ್ರಾಥಮಿಕ ಶಾಲೆಗಳ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಶಿಕ್ಷಕರ ಕೊರತೆ ನೀಗಿಸಬೇಕು, ನೇಮ ಕಾತಿ ಕೂಡಲೇ ಆಗಬೇಕು. -ಕೆ.ನಾಗೇಶ ರಾಜ್ಯಾಧ್ಯಕ್ಷ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ