ರಾಯಚೂರು 08.ಮೇ 25: ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳ್ ಗ್ರಾಮ ಪಂಚಾಯಿತಿಯ ಜೀನೂರು ಕ್ಯಾಂಪಿನಲ್ಲಿ ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ದುಡಿಯೋಣ ಬಾ ಅಭಿಯಾನ ಕಾರ್ಮಿಕರಿಗಾಗಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ಈ ವೇಳೆ ಪೋತ್ನಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಗುರುನಾಥ ರೆಡ್ಡಿ ಅವರು ಮಾತನಾಡಿ, ಕೂಲಿಕಾರರ ಆರೋಗ್ಯದ ಹಿತದೃಷ್ಠಿಯಿಂದ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು, ಉಚಿತ ಚಿಕಿತ್ಸೆ ಮತ್ತು ಔಷಧ ನೀಡಲಾಗುತ್ತಿದ್ದು, ಶಿಬಿರದ ಲಾಭ ಪಡೆಯಬೇಕೆಂದರು.
ಈ ವೇಳೆ ನರೇಗಾ ತಾಲೂಕು ಸಂಯೋಜಕ ಈರೇಶ ಅವರು ಮಾತನಾಡಿ, ನರೇಗಾ ಕಾರ್ಮಿಕರು ಕಡ್ಡಾಯವ ಎನ್ಎಂಎಎಸ್ ಆ್ಯಪ್ ಮೂಲಕ ಹಾಜರಾತಿ ಪಡೆದುಕೊಳ್ಳಬೇಕು. ವಿಕಲಚೇತನರು ಹಾಗೂ ಮಂಗಳಮುಖಿಯರಿಗೂ ದುಡಿಯೋಣ ಬಾ ಅಭಿಯಾನದಡಿ ಕೆಲಸ ನೀಡಲಾಗುತ್ತಿದೆ ಎಂದರು.
ಪ್ರತಿಯೊದು ಕುಟುಂಬಕ್ಕೆ ನರೇಗಾ ಯೋಜನೆಯಿಂದ ನೂರು ದಿನಗಳ ಕೂಲಿ ಕೆಲಸ ಭದ್ರತೆ ನೀಡುತ್ತದೆ. ಕಳೆದ ಏಪ್ರಿಲ್ ತಿಂಗಳಿನನಿಂದ ಕೂಲಿ ದರವು ಕೂಡ 370 ರೂ.ಗಳಿಗೆ ಹೆಚ್ಚಳವಾಗಿದೆ. ಅಲ್ಲದೆ ಪ್ರಧಾನಮಂತ್ರಿ ಜೀವ ಸುರಕ್ಷಾ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಎರಡು ವಿಮೆಗಳನ್ನು ಕಡ್ಡಾಯವಾಗಿ ಎಲ್ಲಾ ಕೂಲಿಕಾರ್ಮಿಕರು ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಬಾಲಪ್ಪ, ಬಿ.ಎಚ್.ಓ ಶರಣಪ್ಪ, ಸೀನಿಯರ್ ಎಚ್.ಐ.ಓ ಹನುಮಂತ, ಆರೋಗ್ಯ ಕೇಂದ್ರದ ಸಿಬ್ಬಂದಿ ಸೋನಾಲಿ ಕಾವಳೆ, ವಿಶ್ವರಾಧ್ಯ, ದೇವೇಂದ್ರಪ್ಪ, ಗುರು ಶರಣ, ಬಸವರಾಜ್, ನಾಗರಾಜ್ ಯಾದವ್, ರಂಜಿತ್, ಹುಚ್ಚಯ್ಯ ಸೇರಿದಂತೆ ಇತರರು ಇದ್ದರು.
