ಕಲಬುರಗಿ,23.ಮಾ.25.: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಶನಿವಾರ ಜಿಲ್ಲೆ ಗಡಿ ತಾಲೂಕು ಆಳಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಬೇಸಿಗೆ ಕುಡಿಯುವ ನೀರು ಕುರಿತು ಖುದ್ದಾಗಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು ಜೊತೆ ತಾಲೂಕಾ ಸಂಚಾರ ಮಾಡಿದ ಅವರು, ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆಗಳಿಗೆ ಅಧಿಕಾರಿಗಳು ಪ್ರಥಮಾದ್ಯತೆ ಮೇಲೆ ಕೂಡಲೆ ಸ್ಪಂದಿಸಬೇಕು. ಕುಡಿಯುವ ನೀರಿಗೆ ಹಾಹಾಕರ ಉಂಟಾಗದAತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಸ್ಥಳೀಯ ಆಡಳಿತ ಮಾಡಬೇಕು ಎಂದರು.
ಮೊದಲು ತಾಲೂಕಿನ ಸರಸಂಬಾ ಗ್ರಾಮಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಬಾಡಿಗೆ ಬಾವಿ ವೀಕ್ಷಿಸಿದರು. ನಂತರ ಸಾವಳೇಶ್ವರ, ಮಾದನಹಿಪ್ಪರಗಾ, ಅಂಬೇವಾಡ ಮತ್ತು ಝಳಕಿ ಗ್ರಾಮಕ್ಕೂ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಖಾಸಗಿ ಬೋರವೆಲ್, ಬಾವಿ ಬಾಡಿಗೆ ಮೇಲೆ ಪಡೆದು ಸಾರ್ವಜನಿಕರಿಗೆ ಬೇಸಿಗೆಯಲ್ಲಿ ನೀರು ಪೂರೈಸಬೇಕೆಂದರು.
ಜಲ ದಿನಾಚರಣೆಯಲ್ಲಿ ಭಾಗಿ,ನೀರು ಮಿತ ಬಳಕೆಗೆ ಸಲಹೆ: ಸಾವಳೇಶ್ವರ ಗ್ರಾಮದಲ್ಲಿ ಗ್ರಾಮ ಪಂಚಾಯತಿಯು ಆಯೋಜಿಸಿದ ವಿಶ್ವ ಜಲ ದಿನಾಚರಣೆಯಲ್ಲಿ ಡಿ.ಸಿ ಮತ್ತು ಸಿ.ಇ.ಓ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಡಿ.ಸಿ. ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಅವರು, ನೀರಿನ ಮಹತ್ವ ಸಾರಿದಲ್ಲದೆ, ಜಲ ಮೂಲಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಶಾಲೆ, ಅಸ್ಪತ್ರೆ, ಕಚೇರಿ, ಮನೆಗಳ ಆವರಣದಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕೆಂದು ಗ್ರಾಮಸ್ಥರಿಗೆ ಕರೆ ನೀಡಿದಲ್ಲದೆ ವಿನಾಕಾರಣ ನೀರು ಪೋಲು ಮಾಡದಂತೆ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಖಾಸಗಿ ಕೊಳವೆ ಬಾವಿ ನೀರು ಪ್ಲೋರೈಡ್ ಮುಕ್ತ ಮತ್ತು ಕುಡಿಯಲು ನೀರು ಯೋಗ್ಯವೆ ಎಂದು ತಾಂತ್ರಿಕ ತಂಡ ನೀರಿನ ಪರೀಕ್ಷೆ ಮಾಡಲಾಯಿತು.
ಚೆಕ್ ಡ್ಯಾಂ ವೀಕ್ಷಣೆ: ಸಾವಳೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿಣ್ಣಿ ಅಬ್ಬಾಸ್ ಗ್ರಾಮದಲ್ಲಿ ಮಹಾರಾಷ್ಟ್ರದ ಶಿವಪುರ ಮಾದರಿಯಲ್ಲಿ ನೀರು ಸಂಗ್ರಹಣಕ್ಕೆ ಮಿನಿ ಜಲಾಶಯದಂತೆ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ಚೆಕ್ ಡ್ಯಾಂ ಕಾಮಗಾರಿ ಡಿ.ಸಿ. ಅವರು ಪರಿಶೀಲಿಸಿದರು. ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ಮತ್ತು ಸ್ಥಳೀಯ ಶಾಸಕ ಬಿ.ಆರ್.ಪಾಟೀಲ ಅವರ ಕನಸಿನ ಯೋಜನೆ ಇದಾಗಿದೆ. ತಾಲೂಕಿನ 9 ಕಡೆ ಈ ರೀತಿಯ ಚೆಕ್ ಡ್ಯಾಂ ನಿರ್ಮಿಸಲಾಗುತ್ತಿದೆ ಎಂದರು ನೀರಾವರಿ ಇಲಾಖೆ ಅಧಿಕಾರಿಗಳು ಡಿ.ಸಿ ಅವರಿಗೆ ಮಾಹಿತಿ ನೀಡಿದರು.
ತಾಲೂಕು ಪಂಚಾಯತ್ ಇ.ಓ ಮಾನಪ್ಪ ಕಟ್ಟಿಮನಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇ.ಇ. ಧನರಾಜ, ಎ.ಇ.ಇ ವಿಜಯಕುಮಾರ, ಜಿಸ್ಕಾಂ ಎ.ಇ.ಇ. ಪ್ರಭುಲಿಂಗ ಸೇರಿದಂತೆ ಇತರೆ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.
